ಯಕ್ಷಗಾನ ಕಾರ್ಯಗಾರಕ್ಕೆ ಮುಖ್ಯಮಂತ್ರಿ ಚಂದ್ರು ಚಾಲನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಒಕ್ಟೋಬರ್ 17 , 2013
|
ಒಕ್ಟೋಬರ್ 17 , 2013
|
ಯಕ್ಷಗಾನ ಕಾರ್ಯಗಾರಕ್ಕೆ ಮುಖ್ಯಮಂತ್ರಿ ಚಂದ್ರು ಚಾಲನೆ
ಸುಳ್ಯ :
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಸಹಯೋಗದೊಂದಿಗೆ 11 ದಿನಗಳ ಕನ್ನಡ, ಸಾಹಿತ್ಯ ಮತ್ತು ಯಕ್ಷಗಾನ ಕಲಾ ಕಾರ್ಯಾಗಾರವು ಇಲ್ಲಿನ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ರಂಗಮಂದಿರದಲ್ಲಿ ಆರಂಭಗೊಂಡಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಬಲಿಪ ನಾರಾಯಣ ಭಾಗವತರ ನಿರ್ದೇಶನದಲ್ಲಿ ಯಕ್ಷಗಾನ ರಂಗಭಾಷೆ ಅಧ್ಯಯನ ವನ್ನು ಕೇಂದ್ರವಾಗಿಟ್ಟು ನಡೆಯುವ ಈ ಕಾರ್ಯಾಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು.
ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ಬಂದು ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು. ಅದೇ ರೀತಿ ರಾಷ್ಟ್ರೀಯ ಉದ್ಯೋಗ ನೀತಿಯೂ ಜಾರಿಗೆ ಬರಬೇಕು ಎಂದ ಮುಖ್ಯಮಂತ್ರಿ ಚಂದ್ರು, ಯಕ್ಷಗಾನದಲ್ಲಿ ಉಳಿದಷ್ಟು ಕನ್ನಡ ಬೇರೆಲ್ಲೂ ಉಳಿದಿಲ್ಲ ಎಂದರು.
ತುಳುಭಾಷೆ ಆದಷ್ಟು ಬೇಗ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಬೇಕು. ಚುನಾವಣೆ ಹತ್ತಿರ ಬಂದಿರುವುದರಿಂದ ಈ ಕೆಲಸ ಮಾಡಿ ಲಾಭ ಪಡೆದುಕೊಳ್ಳುವವರೂ ಪಡೆದುಕೊಳ್ಳಲಿ ಎಂದು ಅವರು ಹೇಳಿದರು.
ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನಗೈದರು. ಸುಳ್ಯ ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದಲ್ಲಿ ಡಾ. ಚಂದ್ರಶೇಖರ ದಾಮ್ಲೆಯವರ ರಂಗಭಾಷೆ ಕೃತಿಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಿಕಟ ಪೂರ್ವಾಧ್ಯಕ್ಷ ಕಾಸರಗೋಡು ಚಿನ್ನಾ ಬಿಡುಗಡೆಗೊಳಿಸಿದರು. ಅ.27ರವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ ಪ್ರದರ್ಶನ, ತಾಳಮದ್ದಲೆ, ಕನ್ನಡ ಕಾವ್ಯಗಳಲ್ಲಿ ಪೌರಾಣಿಕ ಪಾತ್ರ ಚಿಂತನೆ ನಡೆಯಲಿದೆ.
ಕೃಪೆ : http://www.kannadaprabha.com/
|
|
|